ವೆನೆಜುವೆಲಾದ ಮೊರಾನ್ ಬಳಿ ಬುಧವಾರ ಸಂಜೆ ಕೇವಲ ಒಂದು ನಿಮಿಷದ ಅಂತರದಲ್ಲಿ ೭೨ ಮತ್ತು ೭೫ ತೀವ್ರತೆಯ ಅವಳಿ ಭೂಕಂಪಗಳು ಅಪ್ಪಳಿಸಿವೆ. ಸಾವಿನ ಸಂಖ್ಯೆ ೧ ಲಕ್ಷ ದಾಟುವ ಆತಂಕ ವ್ಯಕ್ತವಾಗಿದೆ.
ದಕ್ಷಿಣ ಅಮೆರಿಕಾದ ರಾಷ್ಟ್ರ ವೆನೆಜುವೆಲಾದಲ್ಲಿ (Venezuela) ಬುಧವಾರ ಜೂನ್ ೨೪ ರಂದು ಸಂಜೆ ಸಂಭವಿಸಿದ ಅವಳಿ ಮಹಾಭೂಕಂಪನವು ಭಾರೀ ವಿನಾಶವನ್ನು ಸೃಷ್ಟಿಸಿದೆ. ಕೇವಲ ಒಂದು ನಿಮಿಷದ ಅಂತರದಲ್ಲಿ ಅಪ್ಪಳಿಸಿದ ೭.೨ ಮತ್ತು ೭.೫ ತೀವ್ರತೆಯ ಭೂಕಂಪನದಿಂದಾಗಿ ಕನಿಷ್ಠ ೨೩೫ ಜನರು ಸಾವನ್ನಪ್ಪಿದ್ದಾರೆ ಮತ್ತು ೪,೩೦೦ ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಲವಾರು ಕಟ್ಟಡಗಳು ಭೂಕಂಪದ ತೀವ್ರತೆಗೆ ನೆಲಕ್ಕುರುಳುವ ವಿಡಿಯೋಗಳು ಟಿ.ವಿ. ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದೆ.
ಇದು ಕಳೆದ ಒಂದು ಶತಮಾನದಲ್ಲೇ ವೆನೆಜುವೆಲಾವನ್ನು ಅಪ್ಪಳಿಸಿದ ಅತ್ಯಂತ ಭೀಕರ ಪ್ರಕೃತಿ ವಿಕೋಪವಾಗಿದ್ದು, ಹಂಗಾಮಿ ಅಧ್ಯಕ್ಷೆ ಡೆಲ್ಲಿ ರಾಡ್ರಿಗಸ್ (Delcy Rodriguez) ಅವರು ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಾವಿರಾರು ಜನರು ಸಿಲುಕಿರುವ ಶಂಕೆ ಇದು ಸಮರೋಪಾದಿಯಲ್ಲಿ ಈ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಮೊದಲ ಭೂಕಂಪನವು 7.2 ರಿಕರ್ ಮಾಪಕದ ತೀವ್ರತೆಯೊಂದಿಗೆ, ರಾಜಧಾನಿ ಕ್ಯಾರಕಾಸ್ನಿಂದ (Caracas) ಸುಮಾರು 168ಕಿ.ಮೀ ದೂರದಲ್ಲಿರುವ ಮೊರಾನ್ (Moron) ಸಮುದಾಯದ ಪಶ್ಚಿಮ ಭಾಗದಲ್ಲಿ ಸಂಭವಿಸಿದೆ. ಇದರ ಆಳ 22 ಕಿ.ಮೀ ಆಗಿತ್ತು. ಈ ಆಘಾತದಿಂದ ಜನರು ಚೇತರಿಸಿಕೊಳ್ಳುವ ಮುನ್ನವೇ, ಕೇವಲ 39 ಸೆಕೆಂಡುಗಳ (ಒಂದು ನಿಮಿಷದ) ಅಂತರದಲ್ಲಿ 7.5 ತೀವ್ರತೆಯ ಮತ್ತೊಂದು ಭೀಕರ ಭೂಕಂಪನವು ಅಪ್ಪಳಿಸಿದೆ. ಎರಡನೇ ಭೂಕಂಪನದ ಕೇಂದ್ರಬಿಂದು ಮೊರಾನ್ನಿಂದ 16 ಕಿ.ಮೀ ನೈರುತ್ಯಕ್ಕೆ ಕೇವಲ 10 ಕಿ.ಮೀ. ಆಳದಲ್ಲಿತ್ತು ಎಂದು ವರದಿಯಾಗಿದೆ. ಎರಡೂ ಪ್ರಬಲ ಕಂಪನಗಳು ಒಟ್ಟಿಗೆ ಅಪ್ಪಳಿಸಿದ್ದರಿಂದ ಹಾನಿಯ ಪ್ರಮಾಣ ದುಪ್ಪಟ್ಟಾಗಿದೆ.
ಭಯಾನಕ ಮುನ್ಸೂಚನೆ: ಸಾವು ಮತ್ತು ವಿನಾಶದ ಪ್ರಮಾಣವು ಅತ್ಯಂತ ಭೀಕರವಾಗಿರುವ ಸಾಧ್ಯತೆಯಿದೆ ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೆ (USGS) ಎಚ್ಚರಿಸಿದೆ. ಸಾವಿನ ಸಂಖ್ಯೆ ಕನಿಷ್ಠ 10000 ದಿಂದ ಗರಿಷ್ಠ 100000 (ಒಂದು ಲಕ್ಷ) ತಲುಪುವ ಸಾಧ್ಯತೆ ಇದೆ ಎಂದು ಆರಂಭಿಕ ಅಂದಾಜು ಮಾಡಲಾಗಿದೆ.
ವ್ಯಾಪಕ ಹಾನಿ: ಲಾ ಗೈರಾ (La Guaira) ಕರಾವಳಿ ಪ್ರದೇಶವನ್ನು ‘ವಿಪತ್ತು ವಲಯ ಎಂದು ಘೋಷಿಸಲಾಗಿದ್ದು, ರಾಜಧಾನಿ ಕ್ಯಾರಕಾಸ್ನ ಬಹುತೇಕ ಬಹುಮಹಡಿ ಕಟ್ಟಡಗಳು ಇಸ್ಪೀಟ್ ಎಲೆಗಳಂತೆ ಕುಸಿದುಬಿದ್ದಿವೆ. ಸೈಮನ್ ಬೋಲಿವರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಾವಣಿ ಕುಸಿದುಬಿದ್ದಿದೆ. ವಿದ್ಯುತ್, ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜನರು ಪ್ರಾಣಭಯದಿಂದ ಬೀದಿಗಳಲ್ಲಿ ಉದ್ಯಾನವನಗಳಲ್ಲಿ ರಾತ್ರಿ ಕಳೆದಿದ್ದಾರೆ.
ವಿಪತ್ತಿನ ತೀವ್ರತೆಯನ್ನು ಅರಿತಿರುವ ಅಮೆರಿಕ, ಪರಿಹಾರ ಕಾರ್ಯಾಚರಣೆಗೆ ಅನುಕೂಲವಾಗುವಂತೆ ವೆನೆಜುವೆಲಾ ಮೇಲಿದ್ದ ಆರ್ಥಿಕ ನಿರ್ಬಂಧಗಳನ್ನು ತಾತ್ಕಾಲಿಕವಾಗಿ ಸಡಿಲಿಸಿದೆ. ಬ್ರೆಜಿಲ್, ಸ್ಪೇನ್, ಫ್ರಾನ್ಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ನಿಂದ ನುರಿತ ವಿಪತ್ತು ನಿರ್ವಹಣಾ ತಂಡಗಳು ವೆನೆಜುವೆಲಾಗೆ ಬಂದಿಳಿಯುತ್ತಿವೆ.
ಈ ಭೂಕಂಪನದ ತೀವ್ರತೆ ಎಷ್ಟಿತ್ತೆಂದರೆ, ನೆರೆಯ ಬ್ರೆಜಿಲ್ನ ಅಮೆಜಾನ್ ಕಾಡುಗಳವರೆಗೂ ಕಂಪನದ ಅನುಭವವಾಗಿದೆ.
ಭಾರತವು ಈ ಭೂಕಂಪದ ವಿಪತ್ತಿನ ಬಗ್ಗೆ ದಿಗ್ಭ್ರಮೆ ಮತ್ತು ವಿಷಾದ ವ್ಯಕ್ತಪಡಿಸಿ ಸಹಾಯ ಹಸ್ತ ನೀಡಲು ಒಪ್ಪಿದೆ. ಭಾರತ ಪ್ರಧಾನಿ ನರೇಂದ್ರಮೋದಿಯವರು ವಿಷಾದ ವ್ಯಕ್ತಪಡಿಸುತ್ತಾ ಇಂತಹ ಪರಿಸ್ಥಿತಿಯಲ್ಲಿ ತಮ್ಮ ಜೊತೆಗೆ ನಿಲ್ಲುವುದಾಗಿ ವೆನೆಜುವೆಲಾ ಅಧ್ಯಕ್ಷರಿಗೆ ತಿಳಿಸಿದ್ದಾರೆ.
