ಹಣಕಾಸು ಇಲಾಖೆಯ ಎಚ್ಚರಿಕೆಯನ್ನು ನಿರ್ಲಕ್ಷಿಸಿ, ರಾಜ್ಯ ಸರ್ಕಾರವು ₹39,437 ಕೋಟಿ ವೆಚ್ಚದ ಘನತ್ಯಾಜ್ಯ ನಿರ್ವಹಣೆಯ ಎರಡು ಬೃಹತ್ ಗುತ್ತಿಗೆಗಳಿಗೆ ಅನುಮೋದನೆ ನೀಡಿದೆ. ಹೆಚ್ಚಾದ ವೆಚ್ಚ, ವಾರ್ಷಿಕ ಏರಿಕೆ ಮತ್ತು ಒಂದೇ ಸಂಸ್ಥೆಯೊಂದಿಗೆ ದೀರ್ಘಾವಧಿಯ ಒಪ್ಪಂದ ಬೇಡ ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿತ್ತು. ಆದರೂ ಹೈದರಾಬಾದ್ನ ರಾಮ್ಕೀ ಗ್ರೂಪ್ನ ಸೋದರ ಸಂಸ್ಥೆಯಾದ ದಿಲ್ಲಿ ಎಂಎಸ್ಡಬ್ಲ್ಯು ಸಲ್ಯೂಷನ್ಸ್ ಲಿಮಿಟೆಡ್ಗೆ ಗುತ್ತಿಗೆ ನೀಡಲಾಗಿದ್ದು, ನಗರ ದಲ್ಲಿ ಪ್ರತಿನಿತ್ಯ 5,200 ಟನ್ ತ್ಯಾಜ್ಯವನ್ನು ಸಂಸ್ಕರಿಸುವುದು ಮತ್ತು ವಿಲೇವಾರಿ ಮಾಡುವ ಕಾರ್ಯವನ್ನು ಮುಂದಿನ ೩೦ ವರ್ಷ ಸಂಸ್ಥೆ ನಿರ್ವಹಿಸಲಿದೆ. ಸರ್ಕಾರದ ಆಂತರಿಕ ಟಿಪಣಿಗಳು ಪತ್ರಿಕೆಗೆ ಲಭ್ಯವಾಗಿದ್ದು, ಸಚಿವ ಸಂಪುಟ ದಲ್ಲಿ ಈ ಗುತ್ತಿಗೆಯ ಅನುಮೋದನೆಗೆ ಮಂಡಿಸುವ ಮುನ್ನ, ನಗರಾಭಿವೃದ್ಧಿ ಇಲಾಖೆ ಗುತ್ತಿಗೆಯ ಪ್ರಸ್ತಾವ ಸಲ್ಲಿಸಿದಾಗ ಹಣಕಾಸು ಇಲಾಖೆ ನಾಲ್ಕು ಪ್ರಮುಖ ಅಕ್ಷೇಪಗಳನ್ನು ದಾಖಲಿಸಿದೆ. ಅಲ್ಲದೆ, ಈ ಪ್ರಸ್ತಾವವನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಸಲಹೆ ನೀಡಿತ್ತು. ಇದೆಲ್ಲದರ ನಡುವೆಯೂ ಸಚಿವ ಸಂಪುಟ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಗುತ್ತಿಗೆ ಆರಂಭವಾಗುವ ಮೊದಲೇ ಅತಿಹೆಚ್ಚು ವೆಚ್ಚವನ್ನು ಮಾಡುವ ಬಗ್ಗೆ ಆರ್ಥಿಕ ಇಲಾಖೆ ಪ್ರಮುಖ ಆಕ್ಷೇಪಣೆ ದಾಖಲಿಸಿತ್ತು. ಯಲಹಂಕ, ದಾಸರಹಳ್ಳಿ, ಪೂರ್ವ ಮತ್ತು ಪಶ್ಚಿಮ ವಲಯಗಳನ್ನು ಒಳಗೊಂಡ ಉತ್ತರ ಪ್ಯಾಕೇಜ್ನ ಅಂದಾಜು ವೆಚ್ಚ ₹೧೭.೯೮೨.೯೦ ಕೋಟಿ ಎಂದು ನಗರಾಭಿವೃದ್ಧಿ ಇಲಾಖೆ ನಮೂದಿಸಿದೆ. ಆದರೆ, ₹21.444 ಕೋಟಿಗೆ ಬಿಡ್ ಮಾಡಲಾಗಿದ್ದು, ₹3,361 ಕೋಟಿ ಮೂಲ ಅಂದಾಜು ವೆಚ್ಚಕ್ಕಿಂತ ಹೆಚ್ಚಾಗಿದೆ. ಇದೇ ರೀತಿ ಆರ್.ಆರ್. ನಗರ, ಮಹದೇವಪುರ, ದಕ್ಷಿಣ ಮತ್ತು ಬೊಮ್ಮನಹಳ್ಳಿ ವಲಯಗಳನ್ನು ಒಳ ಗೊಂಡ ದಕ್ಷಿಣ ಪ್ಯಾಕೇಜ್ನ ಅಂದಾಜು ವೆಚ್ಚ ₹15.065 ಕೋಟಿ. ₹17,993.33 ಕೋಟಿಗೆ ಬಿಡ್ ಸಲ್ಲಿಸಲಾಗಿದ್ದು, ₹೨.೯೨೮ ಕೋಟಿ ಹೆಚ್ಚಿನ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಒಟ್ಟಾರೆ, 26.389 ಕೋಟಿ ವೆಚ್ಚ ಹೆಚ್ಚಾಗಿದೆ.
ಮುಂದಿನ ವರ್ಷಗಳ 30 ಅವಧಿಯಲ್ಲಿ ಪ್ರತಿ ವರ್ಷವೂ ಶೇ 5ರಷ್ಟು ಹೆಚ್ಚು ಮಾಡುವ ಒಪ್ಪಂದದ ಬಗ್ಗೆಯೂ ಹಣಕಾಸು ಇಲಾಖೆ ಅಕ್ಷೇಪ ಸಲ್ಲಿಸಿದೆ. ಮುಂದಿನ 30 ವರ್ಷಗಳಿಗೆ ಈ ರೀತಿ ಹೆಚ್ಚಳಕ್ಕೆ ಒಪ್ಪಿಗೆ ನೀಡಿದರೆ, ಪ್ರಸ್ತುತ ದರಕ್ಕಿಂತ ನಾಲ್ಕೂವರೆ ಪಟ್ಟು ಹೆಚ್ಚಾಗಲಿದೆ. ರಿಯಾಯಿತಿ ಅವಧಿಯಲ್ಲಿ ಶೇ 430ರಷ್ಟು ದರ ಹೆಚ್ಚಳವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಒಂದೇ ಸಂಸ್ಥೆಗೆ ಎರಡೂ ಗುತ್ತಿಗೆ ಗಳನ್ನು ನೀಡಿರುವುದರಿಂದ ಒಂದೇ ಸಂಸ್ಥೆಯ ಮೇಲೆ ಅವಲಂಬಿತವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದು ಬೆಂಗಳೂರಿನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಮೂರು ದಶಕ ಒಟ್ಟು ವ್ಯಕ್ತಿ ಅಥವಾ ಸಂಸ್ಥೆಯ ನಿಯಂತ್ರಣಕ್ಕೆ ನೀಡಿದಂತಾಗುತ್ತದೆ ಎಂದು ಆರ್ಥಿಕ ಇಲಾಖೆ ಆತಂಕ ವ್ಯಕ್ತಪಡಿಸಿದೆ.
ಸರ್ಕಾರವೇ ಸೌಲಭ್ಯಗಳಿಗಾಗಿ ಭೂಮಿಯನ್ನು ಒದಗಿಸುತ್ತಿರುವಾಗ ಮತ್ತು ಖಾಸಗಿ ಹೂಡಿಕೆಯು ಅಷ್ಟೇನೂ ಹೆಚ್ಚಿಲ್ಲದಿರುವಾಗ, ಇಷ್ಟು ಸುದೀರ್ಘ ಅವಧಿಯ ಒಪ್ಪಂದದ ಅಗತ್ಯವೇನು ಎಂದು ಪ್ರಶ್ನಿಸಿರುವ ಹಣಕಾಸು ಇಲಾಖೆ, ಗುತ್ತಿಗೆಯ ಅವಧಿಯನ್ನು 30 ವರ್ಷಗಳಿಂದ 10 ವರ್ಷಗಳಿಗೆ ಕಡಿತಗೊಳಿಸಲು ಮತ್ತು ವಾರ್ಷಿಕ ವೆಚ್ಚದ ಏರಿಕೆಯನ್ನು ಶೇ 2.5ಕ್ಕೆ ಮಿತಿಗೊಳಿಸಲು ಶಿಫಾರಸು ಮಾಡಿದೆ. ಮತ್ತೊಂದೆಡೆ, ಬೆಂಗಳೂರಿನ ಹದಗೆಡುತ್ತಿರುವ ಕಸದ ಬಿಕ್ಕಟ್ಟನ್ನು ಉಲ್ಲೇಖಿಸಿ ನಗರಾಭಿವೃದ್ಧಿ ಇಲಾಖೆಯು ಈ ಪ್ರಸ್ತಾವವನ್ನು ಸಮರ್ಥಿಸಿಕೊಂಡಿದೆ. ನಗರದಲ್ಲಿ ಪ್ರತಿದಿನ ಸುಮಾರು 5.200 ಟನ್ ಕಸ ಉತ್ಪಾದನೆಯಾಗುತ್ತದೆ. ಆದರೆ, 1,800 ಟನ್ಗಳಷ್ಟು ಮಾತ್ರ ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ. ಉಳಿದ ತ್ಯಾಜ್ಯವೆಲ್ಲವೂ ಭೂಭರ್ತಿ ಪ್ರದೇಶಕ್ಕೆ ಸೇರುತ್ತಿದೆ. ಈ ಯೋಜನೆಯು ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆಯನ್ನು ಹೇರುವುದಿಲ್ಲ ಮತ್ತು ಇದರ ಸಂಪೂರ್ಣ ವೆಚ್ಚವನ್ನು ಐದು ನಗರ ಪಾಲಿಕೆಗಳೇ ಭರಿಸಲಿವೆ ಎಂದು ಹೇಳಿದೆ. ನಗರಾಭಿವೃದ್ಧಿ ಇಲಾಖೆಯ ವಾದವನ್ನು ಒಪ್ಪದ ಹಣಕಾಸು ಇಲಾಖೆಯು, ಸಚಿವ ಸಂಪುಟದ ಅನುಮೋದನೆಗೂ ಮುನ್ನ ಈ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ತಜ್ಞರು ಮತ್ತು ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿತ್ತು. ಈ ಮಧ್ಯೆ ಕಳೆದ ಗುರುವಾರವೇ ಸಚಿವ ಸಂಪುಟವು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಡತದ ನಡವಳಿಕೆಗೆ ಇನ್ನೂ ಸಹಿ ಹಾಕಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
(ಲೇಖನ ಕೃಪೆ : ಪ್ರಜಾವಾಣಿ/ನವೀನ್ ಮಿನೇಜಸ್)
